1901-1934

ಮುಳ್ಳಳ್ಳಿಯ ಶ್ರೀ ನಿ. ಪ್ರ. ಚನ್ನವೀರ ಸ್ವಾಮಿಗಳು : . (೧೯೨೦)

ಮುಳ್ಳಳ್ಳಿಯ ಶ್ರೀ ನಿ. ಪ್ರ. ಚನ್ನವೀರ ಸ್ವಾಮಿಗಳು ಬಮ್ಮನಹಳ್ಳಿ (ತಾ. ಹಾನಗಲ್ಲ) ಹಿರೇಮಠದಲ್ಲಿ ಜನ್ಮ ತಾಳಿದರು.

ಅಲ್ಲಿಯ ವಿರಕ್ತ ಮಠದ ವತಿಯಿಂದ ೪ನೆಯ ವಯಸ್ಸಿನಲ್ಲಿ ಶಿವಯೋಗಮಂದಿರದಲ್ಲಿ ಪ್ರವೇಶ ಪಡೆದರು. ಪಡೇಕನೂರ ಪಂ. ರೇವಣಸಿದ್ಧ ಶಾಸ್ತ್ರಿಗಳವರಲ್ಲಿ ಸಾಹಿತ್ಯ-ವ್ಯಾಕರಣ ಪಾಠಗಳನ್ನು ಕಲಿತು ಶಿವಯೋಗ ಸಾಧನೆಯಲ್ಲಿ ಆಸಕ್ತಿವಹಿಸಿದರು.

೧೯೪೨ರಲ್ಲಿ ಗದಗಿನ ಶ್ರೀ ಮಾನ್ವಿ ಸಿದ್ಧರಾಮಪ್ಪನವರ ಪ್ರಯತ್ನದಿಂದ ಮುಳ್ಳಳ್ಳಿ (ತಾ. ಕುಂದಗೋಳ, ಜಿ. ಧಾರವಾಡ)ಯ ವಿರಕ್ತ ಮಠಕ್ಕೆ ಅಧಿಕಾರಿಗಳಾಗಿ ಬಂದರು. ಈ ಮಠದ ಮೂಲ ಕರ್ತೃಗಳು ಶ್ರೀ ಚೆನ್ನವೀರ ಸ್ವಾಮಿಗಳು ಪರಮ ತಪಸ್ವಿಗಳು ಅವರ ತರುವಾಯ ಶ್ರೀ ಮಹಾಂತ ಸ್ವಾಮಿಗಳು, ಶ್ರೀ ಮುದಿಯಜ್ಜ ಸ್ವಾಮಿಗಳು, ಶ್ರೀ ಮುದ್ವೀರ ಸ್ವಾಮಿಗಳು, ಶ್ರೀ ಚೆನ್ನವೀರ ಸ್ವಾಮಿಗಳು ಹೀಗೆ ಪರಂಪರೆ ನಡೆದು ಬ೦ದಿದೆ.

ಈ ಮಠದ ಹಿಂದಿನ ಕೆಲವು ಶ್ರೀಗಳು ವ್ಯಾಕರಣ-ತರ್ಕ ಶಾಸ್ತ್ರಗಳಲ್ಲಿ ಬಹಳ ಪಂಡಿತರಾಗಿದ್ದರು. ಮಠದಲ್ಲಿ ಪ್ರಾಚೀನ ಓಲೆಗರಿ ಸಾಹಿತ್ಯವು ವಿಪುಲವಾಗಿದೆ. ಶ್ರೀ ಚನ್ನವೀರ ಸ್ವಾಮಿಗಳು ಅದನ್ನು ಮಂದಿರದ ಗ್ರಂಥಾಲಯಕ್ಕೆ ಅರ್ಪಿಸಿದ್ದಾರೆ. ಶ್ರೀಗಳವರು ಮಠದ ಅಭಿವೃದ್ಧಿಯನ್ನು ಮಾಡಿ ಪ್ರತಿವರ್ಷ ರಥೋತ್ಸವ ಜರುಗಿಸಿ ಪುರಾಣ ಪ್ರವಚನ-ಕೀರ್ತನಗಳಿಂದ ಜನರಲ್ಲಿ ಜಾಗ್ರತಿ ತರುತ್ತಿದ್ದಾರೆ.

 ಬಾರಂಗಿ ಕೂಡ್ಲಿಯ ಶ್ರೀ ನಿ. ಪ್ರ. ಸದಾನಂದ ಸ್ವಾಮಿಗಳು : . (೧೯೨೦)

ಬಾರಂಗಿ ಕೂಡ್ಲಿಯ ಶ್ರೀ ನಿ. ಪ್ರ. ಸದಾನಂದ ಸ್ವಾಮಿಗಳು  ಪುರದಮಠ (ತಾ. ಸಿದ್ದಾಪುರ, ಜಿ. ಕಾರವಾರ) ದಲ್ಲಿ ಜನ್ಮ ತಾಳಿದರು. ಶಿವಯೋಗಮಂದಿರದಲ್ಲಿ ಪಂ. ರೇವಣಸಿದ್ಧ ಶಾಸ್ತ್ರಿಗಳಿಂದ ಶಿಕ್ಷಣ ಪಡೆದು ಶಿವಯೋಗ ಮತ್ತು ಷಟ್ಕರ್ಮ ಯೋಗದಲ್ಲಿಯೂ ಸಾಧನೆ ಮಾಡಿದರು.

೧೯೨೭ ರಲ್ಲಿ ಬಾರಂಗಿ ಕೂಡ್ಲಿ (ತಾ. ಸಾಗರ ಜಿ. ಶಿವಮೊಗ್ಗ) ಯ ವಿರಕ್ತ ಮಠಕ್ಕೆ ಅಧಿಕಾರಿಗಳಾದರು. ಈ ಮಠವು ಬಹಳ ಪ್ರಾಚೀನವಾದುದು. ಕಲ್ಯಾಣಕ್ರಾಂತಿಯ ನಂತರ ಬಸವಾದಿ ಪ್ರಮಥರು ನಾಡಿನಲ್ಲಿ ಅಲ್ಲಲ್ಲಿ ನೆಲಸಿದರು. ಆಗ  ಈ ಮಠದ ಮೂಲ ಪುರುಷರು ಹೂವಿನ ಹಿಪ್ಪರಗಿಯಲ್ಲಿ ಬಂದು ಸ್ಥಿರವಾದರು. ಅಲ್ಲಿಂದ ಭೂಪಾಲರಾಜನ ಕಾಲಕ್ಕೆ ಬಾಗೇವಾಡಿಗೆ ಬಂದರು. ಅಲ್ಲಿಂದ ಹರಿಹರರಾಯನ ಕಾಲಕ್ಕೆ ಹಂಪೆಯಲ್ಲಿ, ಅಲ್ಲಿಂದ ನರಗುಂದ, ಗುತ್ತಿಗೆ ಮಾರ್ಗವಾಗಿ ಕೆಳದಿ, ಇಕ್ಕೇರಿ, ನಗರಸೀಮೆಗೆ ಬಂದು ನೆಲೆಯಾದರು.

ನಗರ ರಾಜ್ಯವು ಹಾಳಾದ ಮೇಲೆ ಶ್ರೀ ಚೆನ್ನಬಸವ ಶಿವಯೋಗಿಗಳು ಇಲ್ಲಿ ಬಂದು ಮಠವನ್ನು ಸ್ಥಾಪಿಸಿದರು. ಶಿವಶರಣರ ಮಡಿವಾಳ ಮಾಚಿದೇವರ ಶಿಷ್ಯರಾದ ಯಾವತ್ತು ಮಡಿವಾಳರು ಹಾಗೂ ಉಪ್ಪಾರರೂ ಈ ಮಠಕ್ಕೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಕಾರ್ತಿಕ, ದಸರೆ, ಶಿವರಾತ್ರಿಯ ಕಾಲಕ್ಕೆ ವಿಜೃಂಭಣೆಯಿಂದ ಉತ್ಸವವನ್ನು ಆಚರಿಸಲಾಗುತ್ತಿದೆ. ಶ್ರೀಗಳವರು ಈ ಭಾಗದ ಜನಗಳಲ್ಲಿಯ ಲೋಪದೋಷಗಳನ್ನು ತಿದ್ದಿ ಅವರಲ್ಲಿ ವಿವೇಕ-ಸದ್ಭಾವನೆಯುಂಟಾಗುವಂತೆ ಮಾಡುತ್ತಿದ್ದಾರೆ. ಲಿಂಗನಮಕ್ಕಿ ಆಣೆಕಟ್ಟಿನ ದೆಶೆಯಿಂದ ಈ ಮಠದ ಸ್ಥಳಾಂತರವಾಗಲಿದೆ.

ಭಾಲ್ಕಿ ಶ್ರೀ ಘ. ಚ. ಚನ್ನಬಸವಸ್ವಾಮಿ ಪಟ್ಟದ್ದೇವರು : . (೧೯೨೦)

ಭಾಲ್ಕಿ ಶ್ರೀ ಘ. ಚ. ಚನ್ನಬಸವಸ್ವಾಮಿ ಪಟ್ಟದ್ದೇವರು ಹಿರೇಮಠದ ಅಧ್ಯಕ್ಷರು. ಅವರು ಕಮಾಲನಗರ (ಜಿ. ಬೀದರ)ದಲ್ಲಿ ಕ್ರಿ. ಶ. ೧೮೯೫ ರಲ್ಲಿ ಜನಿಸಿದರು. ಅವರಾದಿಯ ಪಾಠಶಾಲೆಯಲ್ಲಿ ಕನ್ನಡ ಕಾವ್ಯಗಳ ಅಭ್ಯಾಸ ಮಾಡಿ ಶಿವಯೋಗಮಂದಿರದಲ್ಲಿ ಪ್ರವೇಶ ಪಡೆದರು.

ಪಂ. ಸೋಮಶೇಖರ ಶಾಸ್ತ್ರಿಗಳಲ್ಲಿ ಪಂಚಕಾವ್ಯಗಳನ್ನು ಕಲಿತರು. ಶಿವಾನುಭವಶಾಸ್ತ್ರ ಮತ್ತು ಯೋಗದ ಷಟ್ಕರ್ಮಗಳಲ್ಲಿಯೂ ಪರಿಶ್ರಮವಿದ್ದಿತು. ಪೂಜ್ಯ ಹಾನಗಲ್ಲ ಶ್ರೀಗಳವರ ಸೇವೆಯನ್ನು ಮಾಡುವ ಭಾಗ್ಯ ಪಡೆದರು.

೧೯೨೪ರಲ್ಲಿ ಕಾಶೀ ಸಿಂಹಾಸನಾನ್ವಯಾನುಗತ ಪ್ರತಿನಿಧಿ ಚರಪಟ್ಟಾಧಿಕಾರದ ಭಾಲ್ಕಿ ಹಿರೇಮಠದ ಪೀಠಕ್ಕೆ ಅಧಿಕಾರಿಗಳಾದರು. ಮಠದ ಜೀರ್ಣೋದ್ಧಾರವನ್ನು ಮಾಡಿ ಪರಕೀಯರ ಕೈಸೇರಿ ಹೋಗಿದ್ದ ಆಸ್ತಿಗಳನ್ನು ಪುನಃ ಸಂಪಾದಿಸಿದರು.

ಬೀದರ ಜಿಲ್ಲೆಯಲ್ಲಿ ಶತಮಾನಗಳಿಂದ ಕನ್ನಡ ಸಾಹಿತ್ಯ-ಸಂಸ್ಕೃತಿಗಳು ಅವನತಿ ಪಡೆದಿದ್ದವು. ಶ್ರೀ ಪಟ್ಟದ್ದೇವರು ‘ಕನ್ನಡ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಅದರ ಮುಖಾಂತರವಾಗಿ ಅನೇಕ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿರುವರು.

ಕಮಲ ನಗರದಲ್ಲಿ ೨೦ ವರ್ಷಗಳಿಂದ ಕನ್ನಡ ಶಾಲೆಯನ್ನು ನಡೆಯಿಸಿಕೊಂಡು ಬಂದು ಈಗ ಅದನ್ನು ‘ಶಾಂತಿ ವರ್ಧಕ ಹೈಸ್ಕೂಲಿನ ಮಟ್ಟಕ್ಕೆ ತಂದು ಅದರ ಸಂಚಾಲಕರಾಗಿರುವರು. ಪ್ರೀ ಬೋರ್ಡಿಂಗನ್ನು ನಡೆಯಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಎಲ್ಲ ಅನುಕೂಲತೆಗಳನ್ನು ದಯಾಪಾಲಿಸಿರುವರು.

ಮೋರಗಿ, ಕೂಡಲಸಂಗಮ, ಬೀದರ, ಲಾತೂರು ಹಣೆಗಾವ, ಭಾಲ್ಕಿ ಮೊದಲಾದ ನಗರಗಳಲ್ಲಿ ಗ್ರಾಮಗಳಲ್ಲಿಯೂ ಕನ್ನಡ ಸ್ಕೂಲು ಮತ್ತು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಸಮಾಜ ಸೇವೆಯನ್ನು ಕೈಕೊಂಡಿರುವ ಭಾಲ್ಕಿ ಶ್ರೀ ಪಟ್ಟಾಧ್ಯಕ್ಷರು ಹೈದರಾಬಾದದ ಗಡಿನಾಡಿನಲ್ಲಿ ಕನ್ನಡ ನುಡಿಯ ಗೌರವವನ್ನು ಉಳಿಸಿದ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ.

 ಸಾಲೂರ ಶ್ರೀ ಘ. ಚ. ಚನ್ನವೀರ ಶಿವಾಚಾರ್ಯ ಸ್ವಾಮಿಗಳು : . (೧೯೨೦)

  ಸಾಲೂರ ಶ್ರೀ ಘ. ಚ. ಚನ್ನವೀರ ಶಿವಾಚಾರ್ಯ ಸ್ವಾಮಿಗಳು  ಹಿರಿಯಮಠದ ಅಧಿಕಾರಿಗಳಾಗಿದ್ದಾರೆ.

ಶಿವಯೋಗಮಂದಿರದಲ್ಲಿ ಅವರು ಶ್ರೀ ರೇವಣಸಿದ್ಧ ಶಾಸ್ತ್ರಿಗಳವರಲ್ಲಿ ವ್ಯಾಕರಣ-ಸಾಹಿತ್ಯ ವ್ಯಾಸಂಗ ಮಾಡಿ ಪುರಾಣ-ಶಿವಾನುಭವ ಮತ್ತು ಯೋಗದಲ್ಲಿಯೂ ನಿಷ್ಣಾತರಾದರು.

ಅವರು ಸಾಲೂರ ಹಿರಿಯಮಠದ ಅಭಿವೃದ್ಧಿಯನ್ನು ಮಾಡಿ ಶಿವಮೊಗ್ಗೆಯಲ್ಲಿ ಒಂದು ಆಶ್ರಮವನ್ನು ಸ್ಥಾಪಿಸಿದ್ದಾರೆ.

ಒಂದು ವೈದಿಕ ಪಾಠಶಾಲೆಯನ್ನು ಸ್ಥಾಪಿಸಿ ಜನತೆಯಲ್ಲಿ ಸಂಸ್ಕೃತಿಯ ಪ್ರಸಾರವನ್ನು ಮಾಡಿದ್ದಾರೆ.

ಗುಳೇದಗುಡ್ಡದ ಶ್ರೀ ನಿ. ಪ್ರ. ನೀಲಕಂಠ ಸ್ವಾಮಿಗಳು  (೧೯೧೯)

ಗುಳೇದಗುಡ್ಡದ ಶ್ರೀ ನಿ. ಪ್ರ. ನೀಲಕಂಠ ಸ್ವಾಮಿಗಳು ಮುರಘಾಮಠದ ಅಧಿಪತಿಗಳಾಗಿದ್ದಾರೆ. ಅವರು ಶಿರಸಂಗಿ (ತಾ. ಸವದತ್ತಿಯ ಹಿರೇಮಠದಲ್ಲಿ ಜನ್ಮ ತಾಳಿದರು.

ಶಿವಯೋಗಮಂದಿರದಲ್ಲಿ ಪ್ರವೇಶ ಪಡೆದು ಪಂ. ಬಸವರಾಜ ಶಾಸ್ತ್ರಿಗಳು, ರಾಜಶೇಖರ ಶಾಸ್ತ್ರಿಗಳು ಮತ್ತು ರೇವಣಸಿದ್ಧ ಶಾಸ್ತ್ರಿಗಳವರಲ್ಲಿ ಶಾಸ್ತ್ರಾಭ್ಯಾಸ ಮಾಡಿ ಪ್ರವಚನ-ವ್ಯಾಖ್ಯಾನ ಪಟುಗಳಾದರು. ನಂತರ ಬೆಂಗಳೂರ ಜಯಚಾಮರಾಜೇಂದ್ರ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ಶಿಕ್ಷಣ ಮುಂದುವರಿಸಿದ್ದರು.

೧೯೩೭ ರಲ್ಲಿ ಗುಳೇದಗುಡ್ಡ ಮುರಘಾಮಠದ ಅಧಿಕಾರವನ್ನು ವಹಿಸಿಕೊಂಡು ಅದನ್ನು ಊರ್ಜಿತಗೊಳಿಸಿದರು. ಈ ಮಠದ ಹಿಂದಿನ ಕೆಲವು ಶ್ರೀಗಳವರು ಶಿವಯೋಗಿಗಳೂ ಮತ್ತು ಕವಿಗಳೂ ಆಗಿದ್ದರು.

ವಚನಗಳಿಗೆ ಟೀಕೆಗಳನ್ನು ಬರೆದವರು. ಕಾವ್ಯಗಳನ್ನು ರಚಿಸಿದವರು. ಇದಕ್ಕೆ ಮಠದಲ್ಲಿರುವ ಉತ್ತಮ ತಾಳೆಗರಿ ಗ್ರಂಥಗಳ ಸಂಗ್ರಹವೇ ಸಾಕ್ಷಿಯಾಗಿದೆ. ಶ್ರೀಗಳವರು ಆಯುರ್ವೇದದಲ್ಲಿಯೂ ಬಲ್ಲಿದರು. ಉಚಿತವಾಗಿ ರೋಗಿಗಳಿಗೆ ಚಿಕಿತ್ಸೆ ಮಾಡಿ ಸಮಾಜ ಸೇವೆಯನ್ನು ಮುಂದುವರಿಸಿದ್ದಾರೆ. ಪ್ರವಚನಗಳಿಂದ ಶಿವಾನುಭವ ಪ್ರಸಾರವನ್ನು ಮಾಡುತ್ತಿದ್ದಾರೆ.

ರಾವೂರ ಶ್ರೀ ನಿ. ಪ್ರ. ಸಿದ್ಧಲಿಂಗ ಸ್ವಾಮಿಗಳು : (೧೯೧೯)

 

ರಾವೂರ ಶ್ರೀ ನಿ. ಪ್ರ. ಸಿದ್ಧಲಿಂಗ ಸ್ವಾಮಿಗಳು  ಸಿದ್ಧಲಿಂಗೇಶ್ವರ ಮಠದ ಅಧಿಕಾರಿಗಳು. ಅವರ ಜನ್ಮಸ್ಥಳ ಕೊಟಬಾಗಿ (ಜಿ, ಧಾರವಾಡ) ಜನನ ವರ್ಷ ೧೯೦೮.. ಮೊದಲು ಕೊಟಬಾಗಿಯ ಹಿರಿಯ ಮಠಕ್ಕೆ ಅಧಿಕಾರಿಗಳಾಗಿ ಶ್ರೀ ಷಣ್ಮುಖ ದೇವರೆಂದು ಶಿವಯೋಗಮಂದಿರದಲ್ಲಿ ಪ್ರವೇಶ ಪಡೆದರು.

ಅವರು ಪಂ. ರೇವಣಸಿದ್ಧ ಶಾಸ್ತ್ರಿಗಳು ಮತ್ತು ಪಂ  ಸೋಮಶೇಖರ ಶಾಸ್ತ್ರಿಗಳವರಲ್ಲಿ ವ್ಯಾಕರಣ-ತರ್ಕ ವಿಷಯಗಳ ಅಧ್ಯಯನ ಮಾಡಿ ೧೯೨೭ರಲ್ಲಿ ಪ್ರೌಢ ಶಿಕ್ಷಣಕ್ಕೆಂದು ಕಾಶಿಗೆ ತೆರಳಿದರು. ಅಲ್ಲಿ ಶ್ರೀ ಜ. ಜಯದೇವ ಮುರಘರಾಜೇಂದ್ರ ಫ್ರೀ ಬೋರ್ಡಿಂಗಿನಲ್ಲಿದ್ದು ರಾಜಕೀಯ ಸಂಸ್ಕೃತ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ‘ನವ್ಯ ವ್ಯಾಕರಣ ಶಾಸ್ತ್ರಿ’ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

೧೯೪೮ರಲ್ಲಿ ರಾವೂರು ಮತ್ತು ಆದವಾನಿಯ ಕಲ್ಲುಮಠದ ಅಧಿಕಾರಿಗಳಾದರು. ಪರಾಧೀನವಾದ ಮಠದ ಆಸ್ತಿಗಳನ್ನೆಲ್ಲ ಮರಳಿ ಸಂಪಾದಿಸಿ ಅಭಿವೃದ್ಧಿಗೊಳಿಸಿದರು. ಮಠದಲ್ಲಿ ದಾಸೋಹದ ವ್ಯವಸ್ಥೆಯಿದೆ. ಪ್ರತಿವರ್ಷ ಚೈತ್ರ ಬ. ನವಮಿಯಂದು ಜಾತ್ರೆಯಲ್ಲಿ ಕೀರ್ತನ-ಪ್ರವಚನಾದಿಗಳನ್ನು ನಡೆಯಿಸಿ ಸಾಮಾಜಿಕ, ನೈತಿಕ, ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ; ಅಲ್ಲದೆ ಪ್ರಭುದೇವರ ಶೂನ್ಯ ಸಂಪಾದನೆಯನ್ನು ಸಂಸ್ಕರಿಸಿ ನೂತನ ಆವೃತ್ತಿಯನ್ನು ಸುಂದರವಾಗಿ ಪ್ರಕಟಿಸಿದ್ದಾರೆ; ಇಷ್ಟರಲ್ಲಿಯೆ ಮತ್ತೆ ಕೆಲವು ಮಹತ್ವದ ಪ್ರಾಚೀನ ಗ್ರಂಥಗಳ ಪ್ರಕಾಶನದ ಕಾರ್ಯವನ್ನು ಕೈಕೊಂಡು ಸಾಹಿತ್ಯ ಸೇವೆಯನ್ನು ಮಾಡುತ್ತಿದ್ದಾರೆ.

ಹುಬ್ಬಳ್ಳಿ ಹೊಸಮಠದ ಶ್ರೀ ನಿ. ಪ್ರ. ಶಿವಬಸವ ಸ್ವಾಮಿಗಳು : (೧೯೧೯)

 ಹುಬ್ಬಳ್ಳಿ ಹೊಸಮಠದ ಶ್ರೀ ನಿ. ಪ್ರ. ಶಿವಬಸವ ಸ್ವಾಮಿಗಳು  ಕ್ರಿ. ಶ. ೧೯೧೩ ರಲ್ಲಿ ಅಂದಲಗಿ (ತಾ. ಸಿಗ್ಗಾಂವ, ಜಿ. ಧಾರವಾಡ)ಯ ಹಿರೇಮಠದಲ್ಲಿ ಜನಿಸಿದರು. ಐದು ವರ್ಷದ ವಯಸ್ಸಿನಲ್ಲಿ ಶಿವಯೋಗ ಮಂದಿರದಲ್ಲಿ ಪ್ರವೇಶ ಪಡೆದರು.

ಕನ್ನಡ ಶಿಕ್ಷಣ ಪಡೆದ ಶ್ರೀ ರೇಣುಕಾಚಾರ್ಯರು (ಈಗಿನ ಶ್ರೀ ಸದಾಶಿವ ಸ್ವಾಮಿಗಳು ಹಾನಗಲ್ಲ) ಮತ್ತು ಪಂ. ಪಡೇಕನೂರ ರೇವಣಸಿದ್ಧ ಶಾಸ್ತ್ರಿಗಳಲ್ಲಿಯೂ ಸಾಹಿತ್ಯ, ವ್ಯಾಕರಣ, ವೇದಾಂತ ವಿಷಯಗಳಲ್ಲಿ ಪ್ರೌಢ ಶಿಕ್ಷಣ ಪಡೆದರು. ‘ಕಾವ್ಯತೀರ್ಥ’ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಯೋಗಾಸನಗಳನ್ನು ಮಾಡುವಲ್ಲಿ ಪ್ರವೀಣರಾಗಿದ್ದರು. ೧೯೪೫ರಲ್ಲಿ ಹುಬ್ಬಳ್ಳಿ ಅಕ್ಕಿಹೊಂಡದಲ್ಲಿರುವ ಹೊಸಮಠಕ್ಕೆ ಅಧಿಕಾರಿಗಳಾದರು. ಹೊಸ ಹುಬ್ಬಳ್ಳಿಯನ್ನು ನಿರ್ಮಾಣ ಮಾಡಿದ ಪೇಟೆಯ ಶೆಟ್ಟರಾದ ಶ್ರೀ ಬಸಪ್ಪ ಶೆಟ್ಟರು ಬಹಳಿ ಪೂಜಾನಿಷ್ಠರಾಗಿದ್ದರು.

ಅವರು ತಮ್ಮ ಕ್ರಿಯಾಮೂರ್ತಿಗಳಾದ ಸ್ವಾಮಿಗಳಿಗೆ ಈ ಮಠವನ್ನು ಕಟ್ಟಿಸಿದರು. ಶ್ರೀಗಳು ಅಧಿಕಾರಿಗಳಾಗಿ ಜೀರ್ಣವಾದ ಮಠವನ್ನು ಕಟ್ಟಿಸಿರುವರು. ಮಠದಲ್ಲಿ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಪುರಾಣ-ಕೀರ್ತನಗಳನ್ನು ನಡೆಯಿಸಿ ಶಿವಾನುಭವ ಪ್ರಚಾರವನ್ನು ಮಾಡಿರುವರು.

ಶಿವಯೋಗಮಂದಿರದಲ್ಲಿ ಕೆಲವು ವರ್ಷ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿರುವರು. ಮಠದಲ್ಲಿ ೧೫ ವಿದ್ಯಾರ್ಥಿಗಳಿಗೆ ಪ್ರಸಾದ-ವಸತಿಗಳನ್ನು ಅನುಕೂಲಿಸಿಕೊಟ್ಟಿರುವರು. ಲಿಂ. ಹುಬ್ಬಳ್ಳಿ ಜಗದ್ಗುರು ಸನ್ನಿಧಿಯವರ ಅಪ್ಪಣೆಯಂತೆ ‘ಕರಡೀಶ ಚಂಪೂ’ ಗ್ರಂಥವನ್ನು ಪರಿಷ್ಕರಿಸಿರುವರು;

ಅಲ್ಲದೆ ಶ್ರೀ ಜ. ಗಂಗಾಧರ ಮಹಾಸ್ವಾಮಿಗಳ ಸ್ಮಾರಕವಾಗಿ ಸ್ಥಾಪಿತವಾಗಿರುವ ‘ಧರ್ಮ ಪ್ರಸಾರ ಸಂಶೋಧನ ಸಂಸ್ಥೆ’ಯ ಸದಸ್ಯರಾಗಿ ಸಾಹಿತ್ಯ ಸಂಶೋಧನೆಯ ಕಾರ್ಯವನ್ನು ಮಾಡುತ್ತಿರುವರು. ಶಿವಯೋಗಮಂದಿರದ ಟ್ರಸ್ಟಿಗಳಾಗಿ ಸೇವೆ ಸಲ್ಲಿಸಿರುವರು

ಕೆರೂರ ಶ್ರೀ ನಿ. ಪ್ರ. ರಾಚೋಟಿ ಸ್ವಾಮಿಗಳು : (೧೯೧೯)

 

ಕೆರೂರ ಶ್ರೀ ನಿ. ಪ್ರ. ರಾಚೋಟಿ ಸ್ವಾಮಿಗಳು ರಾಚೋಟೇಶ್ವರ ವಿರಕ್ತ ಮಠದ ಅಧಿಕಾರಿಗಳು. ಅವರ ಜನ್ಮಸ್ಥಳ ತುಗ್ಗಲಡೋಣಿ (ತಾ. ಕುಷ್ಟಗಿ, ಜಿ. ರಾಯಚೂರು). ಶಾ. ಶ. ೧೮೧೫ರ ಶ್ರಾವಣ ಮಾಸದಲ್ಲಿ ಜನನವಾಯಿತು.

ಶಿವಯೋಗ ಮಂದಿರದಲ್ಲಿ ಪ್ರವೇಶ ಪಡೆದು ಶ್ರೀ ರೇವಣಸಿದ್ಧ ಶಾಸ್ತ್ರಿಗಳಲ್ಲಿ ಸಂಸ್ಕೃತ ಶಿಕ್ಷಣ ಪಡೆದರು. ಶಿವಾನುಭವ ಮತ್ತು ಅನುಷ್ಠಾನದಲ್ಲಿ ನಿಷ್ಣಾತರಾದರು. ಶಾ. ಶ. ೧೮೩೭ ರಲ್ಲಿ ಮಠಾಧಿಕಾರವನ್ನು ವಹಿಸಿಕೊಂಡರು.

ಕೆರೂರ ವಿರಕ್ತ ಮಠವು ಬಹಳ ಪ್ರಾಚೀನವಾದುದು. ಹಿಂದಿನ ಸ್ವಾಮಿಗಳಲ್ಲಿ ಕೆಲವರು ಕಾಶಿಯಲ್ಲಿ ಪ್ರೌಢ ಶಿಕ್ಷಣ ಪಡೆದು ಬಂದವರು, ವಚನಗಳಿಗೆ ಟೀಕೆಗಳನ್ನು ಬರೆದಿದ್ದಾರೆ. ಈ ಮಠದ ಓಲೆಗರಿ ಸಂಗ್ರಹವನ್ನು ಮಂದಿರಕ್ಕೆ ಅರ್ಪಿಸಲಾಗಿದೆ.

ಧಾರವಾಡದ ಕನ್ನಡ ಸಂಶೋಧನ ಸಂಸ್ಥೆಯವರಿಗೂ ಇಲ್ಲಿಯ ಕೆಲವು ಅಪ್ರಕಾಶಿತ ಓಲೆಗರಿ ಕಟ್ಟುಗಳನ್ನು ಕಳಿಸಲಾಗಿದೆ. ಶ್ರೀಗಳವರು ಮಠದಲ್ಲಿ ಪುರಾಣ, ಪ್ರವಚನ, ಕೀರ್ತನಗಳನ್ನು ನಡೆಯಿಸಿ ಧರ್ಮ ಪ್ರಸಾರ ಸೇವೆಯನ್ನು ಮಾಡುತ್ತಿರುವರು.

ಹಾರ್ನಹಳ್ಳಿಯ ಶ್ರೀ ನಿ. ಪ್ರ. ನೀಲಲೋಚನ ಸ್ವಾಮಿಗಳು : (೧೯೧೯)

 ಹಾರ್ನಹಳ್ಳಿಯ ಶ್ರೀ ನಿ. ಪ್ರ. ನೀಲಲೋಚನ ಸ್ವಾಮಿಗಳು  ಕೋಡಿಮಠದ ಅಧಿಪತಿಗಳಾಗಿದ್ದಾರೆ. ಅವರು ಕೊತಬಾಳ (ತಾ. ರೋಣ, ಜಿ. ಧಾರವಾಡ)ದಲ್ಲಿ ಜನ್ಮ ತಾಳಿದರು. ಗಜೇಂದ್ರಗಡ ಮಠದ ವತಿಯಿಂದ ಶಿವಯೋಗಮಂದಿರಕ್ಕೆ ಶಿಕ್ಷಣ ಪಡೆಯಲು ಬಂದರು. ಪಂ. ವೀರಭದ್ರ ಶಾಸ್ತ್ರಿಗಳು, ಪಂ. ಹೊನ್ನಿಗನೂರ ಅನ್ನದಾನ ಶಾಸ್ತ್ರಿಗಳು ಮತ್ತು ಪಂ. ರೇವಣಸಿದ್ಧ ಶಾಸ್ತ್ರಿಗಳಲ್ಲಿ ಪಂಚಕಾವ್ಯಗಳನ್ನು ಸಿದ್ಧಾಂತ ಕೌಮುದಿಯನ್ನು ಅಭ್ಯಸಿಸಿದರು. ಅವರು ಕೆಲವು ಕಾಲ ಮಂದಿರದಲ್ಲಿ ಕನ್ನಡ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದರು. ಯೋಗ ಅನುಷ್ಠಾನ ಸಂಗೀತಗಳಲ್ಲಿ ಅಭಿರುಚಿಯುಳ್ಳವರಾಗಿ ಅವುಗಳಲ್ಲಿ ಪರಿಣಿತರಾದರು. ೧೯೩೩ ರಲ್ಲಿ ಶ್ರೀ ಗುರುಲಿಂಗ ಸ್ವಾಮಿಗಳ ನಂತರ ಕೋಡಿಮಠದ ಅಧಿಕಾರಿಗಳಾದರು. ಈ ಮಠವು ಬಹಳ ಪ್ರಾಚೀನವಾದುದು. ಶಾ. ಶ. ೮೫೧ ದುಂದುಭಿನಾಮ ಸಂವತ್ಸರದಲ್ಲಿ ಇದರ ಸ್ಥಾಪನೆಯಾಯಿತು. ತಪಸ್ವಿಗಳಾದ ಶ್ರೀ ಶಿವಲಿಂಗ ಸ್ವಾಮಿಗಳೇ ಈ ಪೀಠದ

ಮೂಲ ಕರ್ತರು. ಇವರ ತರುವಾಯ ರೇವಣ್ಣೊಡೆಯರು, ಕುಮಾರ ಒಡೆಯರು, ನೀಲಮ್ಮೊಡೆಯರು, ಇಮ್ಮಡಿ ಗುರುಸಿದ್ದ ಸ್ವಾಮಿಗಳು, ಪಂಚಾಕ್ಷರಿ ಸ್ವಾಮಿಗಳು, ಮುದ್ದಮಲ್ಲಿಕಾರ್ಜುನ ಸ್ವಾಮಿಗಳು, ಪ್ರಭುಸ್ವಾಮಿಗಳು, ಬಸವಲಿಂಗ ಸ್ವಾಮಿಗಳು, ನಂಜುಂಡ ಸ್ವಾಮಿಗಳು, ಶಿವಲಿಂಗ ಸ್ವಾಮಿಗಳು, (ನಂತರ ೫೦ ವರ್ಷ ಯಾರೂ ಅಧಿಕಾರಿಗಳಾಗಿರಲಿಲ್ಲ). ಹೀಗೆ ಮಠದ ಪರಂಪರೆಯಿದೆ. ಈ ನೀಲಮ್ಮೊಡೆಯರು ಬಹು ಮಹಿಮಾಶಾಲಿಗಳಾಗಿದ್ದು ಈ ಭಾಗದಲ್ಲಿ ಬಹಳ ಪ್ರಭಾವ ಬೀರಿದ್ದಾರೆ. ಅವರ

ಯೋಗಸಮಾಧಿಯು ಈಗ ಮಠದ ಕರ್ತೃ ಪೀಠವಾಗಿ ಪೂಜೆಗೊಳ್ಳುತ್ತಿದೆ. ಶ್ರೀ ಶಿವಲಿಂಗ ಸ್ವಾಮಿಗಳೂ ಬಹಳ ಮಹಿಮಾವಂತರು, ಪವಾಡ ಪುರುಷರು. ಇವೆರಡು ಗದ್ದುಗೆಗಳ ಪ್ರಭಾವ ಈ ನಾಡಿನಲ್ಲಿ ಬಹಳವಾಗಿದೆ. ಇಲ್ಲಿಯ ಸುತ್ತುಮುತ್ತನಾಡಿನ ಗ್ರಾಮಗಳ ಜನರು ತಮ್ಮ ಧಾರ್ಮಿಕ, ಸಾಮಾಜಿಕ ವ್ಯಾಜ್ಯಗಳ ನ್ಯಾಯ ನಿರ್ಣಯಗಳನ್ನು ಈ ಮಠದಲ್ಲಿಯೆ

ಬಂದು ಪಡೆಯುವ ಪದ್ಧತಿಯು ಪ್ರಾಚೀನ ಕಾಲದಿಂದಲೂ ನಡೆದು ಬಂದಿದೆ. ಚಿತ್ರಕಲ್ಲದುರ್ಗದ ಲಿಂ. ಜಗದ್ಗುರು ಶ್ರೀ ಜಯದೇವ ಮುರಘರಾಜೇಂದ್ರ ಮಹಾಸ್ವಾಮಿಗಳು ಇಲ್ಲಿಯ ಪೀಠದ ಪ್ರಭಾವವನ್ನು ಕಂಡು ಅದರ ಅಭಿವೃದ್ಧಿಗಾಗಿ ತೆಂಗಿನ ತೋಟವನ್ನು ಮಾಡಲು ಸನ್ನಿಧಿಯ ಕಾಣಿಕೆಯನ್ನು ದಯಪಾಲಿಸಿದ್ದರು. ಭಕ್ತರ ಪ್ರಯತ್ನದಿಂದ ಈ ಮಠಕ್ಕೆ ಘನವಾದ ಆಸ್ತಿಯಾಗಿದೆ. ಹಿಂದಿನ ಮೈಸೂರ ಮಹಾರಾಜರೂ ಈ ಮಠದಲ್ಲಿ ಪೂಜಾವಿನಿಯೋಗಕ್ಕೆ ೧೦ ಎಕರೆ ಜಮೀನು ದಾನವಾಗಿ ಕೊಟ್ಟಿರುವರು. ಹೈದರ-ಟೀಪು ಸುಲ್ತಾನರೂ ಈ ಪೀಠಕ್ಕೆ ಗೌರವವನ್ನು ಕೊಟ್ಟಿದ್ದರು.

ಈಗಿನ ಶ್ರೀ ನೀಲಲೋಚನ ಸ್ವಾಮಿಗಳು ಈ ಪೀಠದ ಪರಂಪರೆಯನ್ನು ಅನೂಚಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಪ್ರತಿ ವರ್ಷವೂ ಮಹದೇಶ್ವರನ  ಜಾತ್ರೆಯನ್ನು ಮಾಡಿ ಪುರಾಣ ಕೀರ್ತನಗಳಿಂದ ಧರ್ಮ ಪ್ರಸಾರವನ್ನು ಮಾಡುತ್ತಿದ್ದಾರೆ. ಮಠದಲ್ಲಿ ವೈದಿಕ ಪಾಠಶಾಲೆಯನ್ನು ಪ್ರಾರಂಭಿಸಿ ವಿದ್ಯಾರ್ಥಿಗಳ ಪ್ರಸಾದ-ವಸತಿಗಳಿಗೆ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಹಾರ್ನಹಳ್ಳಿಯಲ್ಲಿ ಶ್ರೀ ಶಿವಲಿಂಗೇಶ್ವರ ಅಗ್ರಿಕಲ್ಚರ ಹೈಸ್ಕೂಲನ್ನು ಸ್ಥಾಪಿಸುವ ಯೋಜನೆಯಿದೆ. ೧೯೫೮ ರಲ್ಲಿ ೬೩ ಪುರಾತನರ ಮಂಟಪ ಪೂಜೆಯನ್ನು ಮಾಡಿ ಆ ಕಾಲಕ್ಕೆ ಶಿವಾನುಭವಗೋಷ್ಠಿಯನ್ನು ಏರ್ಪಡಿಸಿದ್ದರು. ಶ್ರೀಗಳವರ ಕಾರ್ಯೋತ್ಸಾಹದಿಂದಾಗಿ ಜನತೆಯಲ್ಲಿಯ ಧಾರ್ಮಿಕ ಸಾತ್ವಿಕ ಭಾವನೆ ಅಳಿಯದೆ ಉಳಿದಿದೆ.

ತಾವರಕೆರೆಯ ಶಿಲಾಮಠಾಧ್ಯಕ್ಷ ಶ್ರೀ ಘ. ಚ. ಸಿದ್ಧಲಿಂಗ ಶಿವಾಚಾರ್ಯರು    : 1918

 

ತಾವರಕೆರೆಯ ಶಿಲಾಮಠಾಧ್ಯಕ್ಷ ಶ್ರೀ ಘ. ಚ. ಸಿದ್ಧಲಿಂಗ ಶಿವಾಚಾರ್ಯರು  ಗಿರಿಯಾಪುರ (ತಾ. ಕಡೂರು, ಜಿ.  ಚಿಕ್ಕಮಗಳೂರು)ದಲ್ಲಿ ಜನಿಸಿದರು.

ಕನ್ನಡ ಲೋವರ ಸೆಕೆಂಡರಿವರೆಗೆ ವ್ಯಾಸಂಗ ಮಾಡಿ ಶಿವಯೋಗ ಮಂದಿರದಲ್ಲಿ ಪ್ರವೇಶ ಪಡೆದರು. ಪಂ. ಕೊಂಗವಾಡ ವೀರಭದ್ರ ಶಾಸ್ತ್ರಿಗಳವರಲ್ಲಿ ಪಂಚ ಕಾವ್ಯಗಳನ್ನು ಕಲಿತರು. ಅವರು ಹೆಚ್ಚಾಗಿ ಶಿವಯೋಗಾನುಷ್ಠಾನದಲ್ಲಿ ಆಸಕ್ತಿಯುಳ್ಳವರಾಗಿದ್ದರು. ನದಿಯ ತೀರದಲ್ಲಿ ಗುಹೆಯನ್ನು ಮಾಡಿಕೊಂಡು ಶಿವಪೂಜೆಯನ್ನು ಮಾಡಿಕೊಳ್ಳುತ್ತಿದ್ದರು.

೧೯೨೨ ರಿಂದ ತಾವರೆಕೆರೆ (ತಾ ಚೆನ್ನಗಿರಿ) ಮಠದ ಆಡಳಿತವನ್ನು ನೋಡಿಕೊಳ್ಳುತ್ತಿರುವರು. ಮಠದ ಭೂಮಿ ಸಂಪತ್ತನ್ನು ಹೆಚ್ಚಿಸಿ ಪ್ರತಿವರ್ಷ ಮಾರ್ಗಶಿರ ಬಹುಳದಲ್ಲಿ ಮಹೇಶ್ವರ ಜಾತ್ರೆಯನ್ನು ನಡೆಯಿಸುತ್ತಾರೆ. ಪುರಾಣ ಪ್ರವಚನಗಳಿಂದ ಜನತೆಯಲ್ಲಿ ಧಾರ್ಮಿಕ ಪ್ರವೃತ್ತಿಯನುಂಟು ಮಾಡುವ ಕಾರ್ಯಗಳನ್ನು ಕೈಗೊಂಡಿದ್ದಾರೆ.