ಬನವಾಸಿಯ ಶ್ರೀ ನಿ. ಪ್ರ. ಸಿದ್ಧವೀರ ಸ್ವಾಮಿಗಳು :1912
ಬನವಾಸಿಯ ಶ್ರೀ ನಿ. ಪ್ರ. ಸಿದ್ಧವೀರ ಸ್ವಾಮಿಗಳು ಉತ್ತರ ಕನ್ನಡ ಜಿಲ್ಲೆಯ ಶಿರ್ಶಿ ತಾಲೂಕಿನ ಇತಿಹಾಸ ಪ್ರಸಿದ್ಧವಾದ ಬನವಾಸಿಯ ಹೊಳೆಮಠದ ಅಧಿಕಾರಿಗಳಾಗಿದ್ದಾರೆ.
ಅವರ ಗುರುಗಳು ತರಿಕೆರೆ (ಜಿ. ಚಿಕ್ಕಮಗಳೂರು)ಯ ಶ್ರೀಮತ್ಶೀ ಸಂಪಾದನೆ ಎಣ್ಣೆಹೊಳೆಮಠದ ಶ್ರೀ ವೃಷಭದೇಶಿಕೇಂದ್ರ ಮಹಾಸ್ವಾಮಿಗಳು. ಜನ್ಮಸ್ಥಲ ಹಾಸನ ಜಿ ಅರಸಿಕೆರೆ ತಾ. ಜಾವಗಲ್ಲಿನ ಬಂದೂರಮಠ.
ಮೊದಲು ಗೋಣಿಬೀಡ ಸಂಪಾದನೆ ಮಠಕ್ಕೆ ಅಧಿಕಾರಿಗಳಾಗಿ ಮಂದಿರಕ್ಕೆ ಬರುವ ಮುನ್ನ ಬೀರೂರಿನ ಪಾಠಶಾಲೆಯಲ್ಲಿ ಸಂಪಿಗೆ ಮಠದ ಶ್ರೀ ಸಿದ್ಧಲಿಂಗ ಶಾಸ್ತ್ರಿಗಳಿಂದ ಕನ್ನಡ-ಸಂಸ್ಕೃತ ಶಿಕ್ಷಣ ಪಡೆದಿದ್ದರು. ಮಂದಿರದಲ್ಲಿ ಯೋಗಸಾಧನೆ, ಲಿಂಗಪೂಜೆ ಹಾಗೂ ಶಿವಾನುಭವ ಶಾಸ್ತ್ರದಲ್ಲಿ ಪರಿಣಿತರಾದರು. ಕ್ರಿ. ಶ. ೧೯೧೫ ರಲ್ಲಿ ಪಾದಚಾರಿಗಳಾಗಿ ಶ್ರೀಶೈಲಕ್ಕೆ ಹೋಗಿ ವೈರಾಗ್ಯ ವೃತ್ತಿಯಿಂದ ಅನುಷ್ಠಾನ ಮಾಡಿದರು.
ಕೆಳದಿ, ಗೊಗ್ಗಿಹಳ್ಳಿ, ಕೂಡ್ಲಿ ಮತ್ತು ಕಪನಳ್ಳಿಯಲ್ಲಿಯೂ ಶಿವಯೋಗಾನುಷ್ಠಾನದಲ್ಲಿದ್ದರು. ಕಬ್ಬೂರ ಶ್ರೀ ಶರಣರಲ್ಲಿ ಶಿವಾನುಭವ ಶಾಸ್ತ್ರವನ್ನು ಅಭ್ಯಾಸ ಮಾಡಿದರು. ಅವರು ಶ್ರೀ ಶರಣರ ಅಂತ್ಯಕಾಲದಲ್ಲಿ ಶುಶ್ತೂಷೆಯ ಸೇವೆ ಸಲ್ಲಿಸಿದರು.
ಶ್ರೀಗಳವರು ಕಾಲು ನಡಿಗೆಯಿಂದಲೇ ಎಡೆಯೂರ ಶ್ರೀಕ್ಷೇತ್ರ ಮತ್ತು ಶಂಭುಲಿಂಗನ ಬೆಟ್ಟದ ಪ್ರವಾಸಗಳನ್ನು ಕೈಕೊಂಡಿದ್ದರು. ಅವರು ಆಚಾರವಂತರು, ಲಿಂಗಪೂಜಾನಿಷ್ಠರು.
ಅಂತೆಯೇ ಹಾನಗಲ್ಲ ಪೂಜ್ಯರು ಪರಳಿಯ ಪ್ರಕರಣದ ನಿಮಿತ್ತ ಹೈದರಾಬಾದಿಗೆ ದಯಮಾಡಿದಂದಿನಿಂದ ಕೊನೆಯವರೆವಿಗೂ ಅವರ ಕ್ರಿಯಾಮೂರ್ತಿಗಳಾಗಿದ್ದರು. ಅವರು ಈಗ ೨೦ ವರ್ಷಗಳಿಂದ ಮಂದಿರದ ಟ್ರಸ್ಟಿಗಳಾಗಿದ್ದು ಸಂಸ್ಥೆಯ ಹಿತೇಚ್ಚುಗಳಾಗಿದ್ದಾರೆ.